ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, June 3, 2017

ಗಾಯದ ಹೂವುಗಳು ಮತ್ತು ಕಡಲ ಕರೆ ಕುರಿತು ಡಾ. ಪಾರ್ವತಿ

ಪ್ರಿಯ ಸತೀಶ್,

ನೀವು ಪ್ರೀತಿಯಿಂದ ಕಳುಹಿಸಿ ಕೊಟ್ಟ ನಿಮ್ಮ ಕವಿತಾ ಸಂಕಲನ ಗಾಯದ ಹೂವುಗಳು ಓದಿದೆ. ಅಬ್ಬ! ಅದೆಷ್ಟು ಮನಕದಡುವಂತೆ ನಿಮ್ಮ ಅಂತರಂಗದ ತುಡಿತಗಳಿಗೆ ಅಭಿವ್ಯಕ್ತಿ ನೀಡಿದ್ದೀರಿ! ನೀವು ಅಲ್ಲಿ ಜೋಡಿಸಿಟ್ಟ ಪ್ರತಿಯೊಂದು ಗುಲಾಬಿಯನ್ನು ಪಡೆಯಬೇಕಿದ್ದರೂ ನಾವು ಮುಳ್ಳುಗಳಿಂದ ಚುಚ್ಚಿಸಿಕೊಳ್ಳಬೇಕೇನೋ ಅನ್ನುವ ಹಾಗೆ. ಓದುತ್ತಿದ್ದಂತೆ ನನಗೆ ಷೆಲ್ಲಿಯ ಮಾತುಗಳು ನಿಮ್ಮ ಕವಿತೆಗಳ ಸಂದರ್ಭದಲ್ಲಿ ತುಂಬ ಅರ್ಥಪೂರ್ಣ ಅನ್ನಿಸಿತು: ಅವರ್ ಸ್ವೀಟೆಸ್ಟ್ ಸಾಂಗ್ಸ್ ಆರ್ ದೋಸ್ ದ್ಯಾಟ್ ಟೆಲ್ ಅಸ್ ಆಫ್ ಸ್ಯಾಡೆಸ್ಟ್ ಥಾಟ್ಸ್ ಅಂತ. ಕೌಟುಂಬಿಕ ಬದುಕಿನಲ್ಲಿ ಎದುರಿಸಿದ ಕರುಳಿರಿಯುವ ಬಡತನದ ನೋವು, ಪರಿಸರ ನಾಶ ಮತ್ತು ಸುತ್ತಲಿನ ಭೂಮಿ ಬೋಳಾಗುತ್ತಿರುವ ಬಗೆಗಿನ ಕಾಳಜಿ, ನಿಸರ್ಗ ಪ್ರೇಮ, ಗಂಡು ಹೆಣ್ಣಿನ ನಡುವಣ ಅರ್ಥಪೂರ್ಣ ಸಂಬಂಧ, ಗ್ರಾಮೀಣ ಬದುಕಿನ ಸಹಜತೆಯ ವಿರುದ್ಧ ನಿಲ್ಲುವ ನಾಗರಿಕತೆಯ ಕೃತಕತೆ, ಏನುಂಟು-ಏನಿಲ್ಲ ನಿಮ್ಮ ಕವಿತೆಗಳಲ್ಲಿ! ನಿಜವಾಗಿಯೂ ಅವು ಕೆಂಡದಲ್ಲಿ ಸುಟ್ಟ ಹಸಿಮೀನುಗಳೇ ಹೌದು.

ಎಷ್ಟೋ ಕವಿತೆಗಳ ಸಾಲುಗಳು ಅರ್ಥವಾಗುವುದಿಲ್ಲ.ಅರ್ಥಗಳನ್ನು ಸಾಲುಗಳ ನಡುವೆ ಆಳದಲ್ಲೆಲ್ಲೋ ಹುಗಿದಿಟ್ಟಿದ್ದೀರಿ. ರೂಪಕಗಳು, ಪ್ರತಿಮೆ ಸಂಕೇತಗಳು ಎಲ್ಲದರಲ್ಲೂ ನಿಮ್ಮದೇ ವಿಶಿಷ್ಟ ಛಾಪು. ಪ್ರೇಮ ಕವಿತೆಗಳಲ್ಲಿ ಒಂದೆರಡು ಕಡೆ ಇಂಗ್ಲಿಷ್ ಕವಿ ಜಾನ್ ಡನ್ ಶೈಲಿಯನ್ನು ಕಂಡೆ. ಬಿಡಿ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿದರೂ ಒಟ್ಟು ಕವಿತೆಗಳ ಓದು ನೀಡುವ ಕಾವ್ಯಾನುಭೂತಿ ಮಾತ್ರ ಮೈ ಝುಮ್ಮೆನ್ನಿಸುವಂಥದ್ದು. ಯಾವುದೋ ಲೋಕಕ್ಕೆ ಕರೆದೊಯ್ಯುವಂಥದ್ದು. ದುಃಖವು ನಿಮ್ಮ ಕವಿತೆಗಳ ಸ್ಥಾಯೀಭಾವ ಅನ್ನಿಸುತ್ತದೆ. ಕೊಡಗಿನ ಮಂಜು ಮುಸುಕಿದ ಅಥವಾ ಮೋಡ ತುಂಬಿದ ವಾತಾವರಣದಲ್ಲಿ ಕೊಂಡು ಹೋಗಿ ಬಿಟ್ಟಂತೆ. ಈ ಅನುಭೂತಿಯನ್ನು ಓದುಗ ಅನುಭವಿಸಲು ಮಾತ್ರ ಸಾಧ್ಯ. ಅದು ವಿವರಣೆಗೆ ನಿಲುಕುವಂಥದ್ದಲ್ಲ. ಪ್ರಾಯಶಃ ಅದರ ಅಗತ್ಯವೂ ಇಲ್ಲ ಅಲ್ಲವೆ?


ನೀವು ಮಲೆಯಾಳದಿಂದ ಅನುವಾದಿಸಿದ ಕಡಲ ಕರೆ ಸಂಕಲನಕ್ಕೆ ನೀವು ಆಯ್ಕೆ ಮಾಡಿಕೊಂಡ ಕವನಗಳೂ ನಿಮ್ಮ ಅಭಿರುಚಿಯನ್ನ ಸಾರಿ ಹೇಳುತ್ತವೆ. ನಿಮ್ಮದೇ ಕವಿತೆಗಳಗಿಂತ ಅವು ಬಹಳ ಭಿನ್ನವಾಗೇನೂ ಇಲ್ಲ. ಓರ್ವ ಅನುವಾದಕರಾಗಿಯೂ ನೀವು ನಿಮ್ಮ ಸೃಜನಶೀಲತೆಯನ್ನು ಮೆರೆದಿದ್ದೀರಿ.ಅಲ್ಲದೆ ಅಷ್ಟೆಲ್ಲ ಮಂದಿ ಕವಿಗಳ ನೂರಾರು ಕವಿತೆಗಳನ್ನು ಓದಿ ಆಯ್ಕೆ ಮಾಡಿ ಅವರನ್ನೆಲ್ಲ ಸಂಪರ್ಕಿಸಿ ಅನುವಾದವನ್ನು ಪ್ರಕಟಿಸುವುದೆಂದರೆ ಹರಸಾಹಸವೇ ಸರಿ. ಡಾ ಅಶೋಕ ಕುಮಾರ್ ಹೇಳಿರುವಂತೆ ನಿಮ್ಮ ಮಾತುಗಳಲ್ಲಿ ನೀವು ಮಾಡಿರುವ ಉಪಕಾರ ಸ್ಮರಣೆ ನಿಮ್ಮ ಅಮಿತ ಸೌಜನ್ಯದ ಪ್ರತೀಕ. ನೀವು ಕವಿತೆಗಳಿಗೆ ಬಳಸುವ ಪದಗಳ ಲಾಲಿತ್ಯ, ನಿಮ್ಮ ಶೈಲಿಯ ಸೌಂದರ್ಯ, ನಿಮ್ಮ ಧ್ವನಿಯ ಗಾಂಭೀರ್ಯ, ಕವಿತೆಗಳಲ್ಲಿ ಕಾಣಿಸುವ ನಿಮ್ಮೊಳಗಿನ ಸೂಕ್ಷ್ಮ ಸಂವೇದನೆಗಳು- ಎಲ್ಲವೂ ಮುಂದೆ ನೀವೊಬ್ಬ ಅತ್ಯುತ್ತಮ ಕವಿಯಾಗಿ ಎತ್ತರಕ್ಕೆ ಏರುತ್ತೀರಿ ಎಂಬುದನ್ನು ಸೂಚಿಸುತ್ತವೆ. ಸತೀಶ್, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
*


02.06.2017 ಡಾ. ಪಾರ್ವತಿ ಜಿ. ಐತಾಳ್, ಕುಂದಾಪುರ

No comments:

Post a Comment